ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ!

ಅಲ್ಲಿ ರಾಷ್ಟ್ರ ಧ್ವಜ ಹಾರುತ್ತದೋ ಇಲ್ವೋ? ಹಾರಿದರೆ ಏನಾಗುತ್ತೆ? ಅನ್ನೋದಕ್ಕೆಲ್ಲ ಬಹುಷಃ ಜನವರಿ ೨೬ರ ಇಂದಿನ ದಿನ ಉತ್ತರ ಸಿಗಲಿದೆ.Fine ನಾನೀಗ ಅರುಂಧತಿ ರಾಯ್ ಅವರ ಹೇಳಿಕೆಯ ಸುತ್ತ ಮಾತಾಡ ಹೊರಟೆ.

‘ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ’ ಅಂತೇಳಿದ ಸುದ್ದಿ ಜೀವಿ  ಅರುಂಧತಿ ರಾಯ್ ಅವರಿಗೆ ’ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ’, ಹಾಗೆ ಇನ್ನ ಸ್ವಲ್ಪ ಕೆದಕುತ್ತ ಹಿಂದೆ ಹೋದರೆ ಖುದ್ದು ‘ಭಾರತವೂ ಸಹ ಭಾರತದ ಭಾಗವಾಗಿರಲಿಲ್ಲ’ ಅನ್ನೋದು ಗೊತ್ತಿಲ್ಲ ಅನ್ನಿಸುತ್ತೆ.ಅಸಲಿಗೆ ಉಪಖಂಡವನ್ನ ಆಡಳಿತದ ಕಾರಣಕ್ಕಾಗಿ ‘ಭಾರತ’ ಅಂತ ಹಿಡಿದಿಟ್ಟವರು ಬ್ರಿಟಿಷರು.೪೭ರಲ್ಲಿ ಅವರು ಸ್ವಾತಂತ್ರ್ಯ ಕೊಟ್ಟು ಹೊರಡುವಾಗ ಇಲ್ಲಿ ೫೫೦ಕ್ಕು ಹೆಚ್ಚು ಸಣ್ಣ ಪುಟ್ಟ ರಾಜ ಸಂಸ್ಥಾನಗಳಿದ್ದವು. ಅವೆಲ್ಲ ಪಟೇಲರ ಮಂತ್ರದಂಡಕ್ಕೆ ತಲೆಬಾಗಿ ಭಾರತದ ಒಕ್ಕೊಟವನ್ನ ಸೇರಿಕೊಂಡವು.

ಆಗಿನ ಕಾಲಕ್ಕೆ ಇದ್ದ ೪ ದೊಡ್ಡ ಸಂಸ್ಥಾನಗಳು ಅಂದರೆ ಮೈಸೂರು,ಹೈದರಾಬಾದು,ಜುನಾಗಢ ಮತ್ತು ಕಾಶ್ಮೀರ; ಮೈಸೂರಿನ ಹಿಂದೂ ಮೆಜಾರಿಟಿಯ ಪ್ರದೇಶದಲ್ಲಿ , ಹಿಂದೂರಾಜ ; ಹೈದರಬಾದಿನ ಹಿಂದೂ ಮೆಜಾರಿಟಿಯ ಪ್ರದೇಶದಲ್ಲಿ ಮುಸ್ಲಿಂ ರಾಜ ; ಕಾಶ್ಮೀರದಲ್ಲಿ ಮುಸ್ಲಿಂ ಮೆಜಾರಿಟಿ ಪ್ರದೇಶದಲ್ಲಿ ಹಿಂದೂ ರಾಜ.ಪುಟ್ಟ ಜುನಾಗಢದಲ್ಲಿಯೂ ಹಿಂದೂ ಮೆಜಾರಿಟಿ ಪ್ರದೇಶದಲ್ಲಿ ಮುಸ್ಲಿಮ್ ರಾಜರಿದ್ದ ವಿಲಕ್ಷಣ ಪರಿಸ್ಥಿತಿಯದು. ನಾಲ್ಕು ಸಂಸ್ಥಾನಗಳ ರಾಜರು ಒಂದು ಹಂತದಲ್ಲಿ ಸ್ವತಂತ್ರವಾಗೆ ಇರಲು ಬಯಸಿದ್ದರು.ಆದರೆ ಜನಾಭಿಪ್ರಾಯಕ್ಕೆ ಮಣಿದು ಮೈಸೂರು ಅರಸರು ಭಾರತದ ಒಕ್ಕೂಟ ಸೇರಿದರು.ಗುಜರಾತಿನ ಜುನಾಗಡದ ಸುಲ್ತಾನ ಪ್ರಜೆಗಳ ಆಶಯಕ್ಕೆ ವಿರುದ್ಧವಾಗಿ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಒಪ್ಪಿದ್ದ ಆದರೆ ಜನಮತಗಣನೆಯಲ್ಲಿ ಭಾರತದೆಡೆಗೆ ಬಂದ ಅಭಿಪ್ರಾಯಕ್ಕೆ ಮತ್ತು ಸೈನಿಕ ಕಾರ್ಯಚರಣೆಯಿಂದಾಗಿ ಭಾರತದ ಒಕ್ಕೂಟ ಸೇರಿದ.ಹೈದರಾಬಾದ್ನ ಕತೆಯು ಸೇನಾ ಕಾರ್ಯಾಚರಣೆಯ ಮೂಲಕವೇ ಮುಗಿದಿದ್ದು.ಇನ್ನ ಉಳಿದಿದ್ದು ’ಕಾಶ್ಮೀರ’

ಅತ್ತ ‘ಪಾಕಿಸ್ತಾನ’ ಅನ್ನೋ ಹೆಸರನ್ನ ಕಾಯಿನ್ ಮಾಡುವಾಗ ಅವರು ಕಾಶ್ಮೀರವನ್ನ default ಆಗಿ ಸೇರಿಸಿಕೊಂಡೆ ಮಾಡಿದ್ದರು ಮತ್ತು ಕಾಶ್ಮೀರ ಅವರಿಗೆ ಸೇರೆ ಸೇರುತ್ತದೆ ಅನ್ನೋ ನಂಬಿಕೆಯೂ ಇತ್ತು.ಇತ್ತ ನೆಹರೂವಿಗೆ ಮುಸ್ಲಿಂ ಬಾಹುಳ್ಯದ ಕಾಶ್ಮೀರದ ಮೇಲೆ ಅಂತ ಆಸಕ್ತಿಯೇನು ಇರಲಿಲ್ಲವಾದರೂ ರಾಜ ಹರಿಸಿಂಗ್ ವಿರುದ್ಧ ತೊಡೆ ತಟ್ಟಿದ್ದ ಗೆಳೆಯ ಶೇಕ್ ಅಬ್ದುಲ್ಲಾನಿಗೆ ಬೆಂಬಲ ಕೊಡುತಿದ್ದರು.ಪಾಕಿಸ್ತಾನಕ್ಕೆ ಹೋಗುವುದಾ? ಭಾರತಕ್ಕಾ? ಇಲ್ಲ ಸ್ವಾತಂತ್ರವಾಗಿರುವುದಾ? ಅಂತ ತೀರ ದಿಗಿಲಿಗೆ ಬಿದ್ದವರು ರಾಜ ಹರಿಸಿಂಗ್.ಪಾಕಿಸ್ತಾನಕ್ಕೆ ಹೋಗುವ ಮನಸಿಲ್ಲ,ನೆಹರೂವಿನೊಂದಿಗೆ ಮಾತಾಡುವ ಮನಸ್ಸು ಇಲ್ಲ ಕಡೆಗೆ ಸ್ವತಂತ್ರವಾಗೆ ಇರುವ ನಿರ್ಧಾರ ಕೈಗೊಳ್ಳುವ ಹಂತದಲ್ಲಿದ್ದಾಗಲೇ ಕನಲಿದ್ದರು ಜಿನ್ನಾ.ಅಕ್ಟೋಬರ್ ತಿಂಗಳಲ್ಲಿ ಗುಡ್ಡಗಾಡು ಜನರನ್ನ ಮತ್ತು ಅವರ ಸೋಗಿನಲ್ಲಿ ಪಾಕಿ ಸೈನ್ಯವನ್ನ ಕಣಿವೆಗೆ ನುಗ್ಗಿಸಿಯೇ ಬಿಟ್ಟರು! ಬಹುಷಃ ಭಾರತದ ಕಾಶ್ಮೀರದ ವಿಷಯದಲ್ಲಿ ಮೊದಲು ಎಡವಿದ್ದು ಇಲ್ಲೇನಾ?

ಭಾರತದ ಒಕ್ಕೂಟಕ್ಕೆ ಸೇರಿದರೆ ಕಾಶ್ಮೀರವನ್ನ ಪಾಕಿಗಳಿಂದ ಉಳಿಸುತ್ತೀವಿ ಅಂತ ಭಾರತ ಹೇಳಿದ್ದು ನಿಜವೇ ಆದರೆ, ಖಂಡಿತ ಭಾರತ ಅಲ್ಲೇ ಎಡವಿತ್ತು ಅನ್ನಬಹುದು.ತೀರ ಸಹಾಯ ಬೇಡಿಬಂದವರ ಬಳಿ ಹಾಗೆ ವ್ಯವಹಾರ ಮಾಡುವ ಬದಲು ಪಾಕಿಗಳನ್ನ ಕಣಿವೆಯಿಂದ ಹೊರಗೆ ಅಟ್ಟಿ ನಂತರ ಮಾತಿಗೆ ಕೂರಬಹುದಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸಿತ್ತುರಿತ್ತದೆ ನನಗೆ.ಆತುರಾತುರದಲ್ಲಿ ಕಾಶ್ಮೀರವನ್ನ ಭಾರತದ ಒಕ್ಕೊಟಕ್ಕೆ ಸೇರಿಸಿಕೊಂಡು ಮಾಡಿದ ಮೊದಲು ಎಡವಟ್ಟು ಒಂದು ಕಡೆಯಾದರೆ, ಪಾಕಿಗಳನ್ನ ಕಣಿವೆಯಿಂದ ಹಿಮ್ಮೆಟ್ಟುತ್ತಿದ್ದ ಭಾರತೀಯ ಯೋಧರ ಕೈ ಕಟ್ಟಿ ಕೆಂಪುಗುಲಾಬಿಯ ನೆಹರೂ ವಿಶ್ವ ಸಂಸ್ಥೆಯ ಬಾಗಿಲು ತಟ್ಟಿದ್ದು ಎರಡನೇ ಹಾಗೂ ಭಾರತದ ಮಟ್ಟಿಗೆ ಇಂದಿಗೂ ಕಾಡುತ್ತಿರುವ ಅತಿ ದೊಡ್ಡ ಎಡವಟ್ಟು.ಮಾಡಿದ ಎರಡು ಎಡವಟ್ಟು ಸಾಲದು ಅನ್ನಿಸಿಯೋ ಅನೋ, ಲಾಲ್ ಚೌಕ್ನಲ್ಲಿ ನಿಂತು ವೀರಾವೇಶದಲ್ಲಿ ಭಾಷಣ ಮಾಡಿದ ನೆಹರೂ ೩೭೦ನೆ  ಕಲಂನ ಪ್ರಕಾರ ವಿಶೇಷ ಸ್ಥಾನಮಾನ ನೀಡುವ ಮಾತನಾಡಿ,ಕಾಶ್ಮೀರಿಗಳಿಗೆ ತಾವು ಈ ದೇಶದ ಅಥಿತಿಗಳು ಅನ್ನೋ ಭಾವನೆ ಮೂಡಿಸಿ ಶವದ ಪೆಟ್ಟಿಗೆಗೆ ಮೊಳೆ ಹೊಡೆಯೋ ಕೆಲಸವನ್ನು ಮಾಡಿ ಮುಗಿಸಿದರು.

ಹಾಗೆ ನೋಡಿದರೆ ಭಾರತ-ಪಾಕಿಗಿಂತಲೂ ಬ್ರಿಟಿಷರಿಗೆ ಕಾಶ್ಮೀರ ಅನ್ನೋ strategic ಪ್ರದೇಶ ಸ್ವಾತಂತ್ರವಾಗಿರುವುದು ಬಹುಷಃ ಬೇಕಿರಲಿಲ್ಲ ಅನ್ನಿಸುತ್ತದೆ.ಕಾರಣ ರಷ್ಯ!, ಹೌದು ರಷ್ಯನ್ನರು ೧೮ನೆ ಶತಮಾನದ ಕೊನೆಯಲ್ಲೇ ಕಾಶ್ಮೀರದ ಆಸು-ಪಾಸಿಗೆ ಬಂದಿಳಿದಿದ್ದರು.ತಾವು ಏಷ್ಯಾದಿಂದ ಕಾಲ್ತೆಗೆದ ಮೇಲೆ ಮತ್ತೆ ರಷ್ಯನ್ನರು ಇಲ್ಲಿ ಬಾರದಿರಲಿ ಮತ್ತು ಆ ಮೂಲಕ ತಮ್ಮ ಪ್ರಭಾವವನ್ನ ಈ ವಲಯದಲ್ಲಿ ಬೀರದಿರಲಿ ಅನ್ನುವ ಬ್ರಿಟಿಶ್ ಮನಸ್ಸಿಗೆ ಸಹಜವಾಗೇ ಅರೆ ಸಮಾಜವಾದಿ ನೆಹರುವಿನ ಭಾರತಕ್ಕಿಂತ ಜಿನ್ನಾರ ಉನ್ಮತ್ತ ಪಾಕಿಸ್ತಾನ ಪ್ರಿಯವಾಗಿತ್ತು ಮತ್ತು ಅದೇ ಕಾರಣಕ್ಕಾಗಿ ಅದು ವಿಶ್ವ ಸಂಸ್ಥೆಯಲ್ಲಿ ಭಾರತದ ವಿರುದ್ಧ ನಿಲುವು ತಳೆದಿತ್ತು ಅನ್ನಿಸುತ್ತದೆ.

ನಮ್ಮ ದೇಶದಲ್ಲೂ ಕೆಲವರು ’ಜನಮತಗಣನೆ’ಯನ್ನ ಯಾಕೆ ಭಾರತ ಮಾಡುತ್ತಿಲ್ಲ ಅಂತ ಕೇಳುತ್ತಿರುತ್ತಾರೆ, ಬಹುಷಃ ಅಂತವರಿಗೆ ಗೊತ್ತಿರಲಿಕ್ಕಿಲ್ಲ.ವಿಶ್ವಸಂಸ್ಥೆಯ ೩ ಸಂಧಾನ ಸೂತ್ರಗಳು ಹೀಗಿದ್ದವು.

೧.ತತ್ತಕ್ಷಣ ಯುದ್ಧ ವಿರಾಮ ಘೋಷಿಸುವುದು.

೨.ಪಾಕಿಸ್ತಾನ ತಾನು ವಶಪಡಿಸಿಕೊಂಡ ಕಾಶ್ಮೀರದ ಭೂ ಪ್ರದೇಶದಿಂದ ಹಿಂದೆ ಸರಿಯುವುದು.

೩.ಜನಮತಗಣನೆ

ಇದರಲ್ಲಿ ಮೊದಲೆನೆಯ ಮಾತಿನಂತೆ ಎರಡು ದೇಶಗಳು ನಡೆದುಕೊಂಡವು,ಆದರೆ ಪಾಕಿಗಳು ಎರಡನೆ ಮಾತನ್ನ ಪೂರೈಸಲಿಲ್ಲ.ಹಾಗಾಗಿ ಭಾರತ ಮೂರನೆಯದಕ್ಕೆ ಕೈ ಹಾಕುವಂತಿಲ್ಲ! ತಪ್ಪು ಭಾರತದ್ದ?

ಹಾಗೆ, ಕಾಶ್ಮೀರಕ್ಕೆ ಸ್ವಾಯತ್ತತೆ ಕೊಡಿ ಅನ್ನುವ ಜನರಿಗೆ ಒಂದು ಪ್ರಶ್ನೆ, ಅವರಾಗೆ ಒಪ್ಪಿ ನಮ್ಮ ಒಕ್ಕೊಟಕ್ಕೆ ಸೇರಿಕೊಂಡ ಮೇಲೆ ‘ಅವರಿಗೇಕೆ ಪ್ರತ್ಯೇಕ ಸ್ಥಾನ-ಮಾನ ನೀಡಬೇಕು?,ಈ ದೇಶದ ಉಳಿದ ರಾಜ್ಯದವರಂತೆ ತಾವುಗಳು ಸಹ ಅನ್ನುವ ಮನೋಭಾವನೆ ಅವರಿಗೂ ಬರುವುದು ಬೇಡವೇ?’ ಒಂದು ವೇಳೆ ಸ್ವಾಯತ್ತತೆ ಅಥವಾ ಸ್ವಾತಂತ್ರ್ಯವನ್ನ ಕೊಡುವುದಾದರೆ ಅದನ್ನ ಕೇವಲ ಕಾಶ್ಮೀರಕ್ಕೆ ಕೊಡಬೇಕಾ? ಯಾಕಂದ್ರೆ ಕಾಶ್ಮೀರ ಸ್ವತಂತ್ರವಾದರೆ ಲಡಾಕ್‌ನಲ್ಲಿನ ಬೌದ್ಧರು,ಜಮ್ಮು ಪ್ರದೇಶದ ಹಿಂದೂ ಮತ್ತು ಸಿಖ್ಖರು ಹಾಗೂ ಕಾಶ್ಮೀರ ಕಣಿವೆಯ ಮುಸ್ಲಿಮರ ಜತೆ ಗುರುತಿಸಿಕೊಳ್ಳದ ಗುಜ್ಜರ್, ಪಂಜಾಬಿ ಮೊದಲಾದ ಗುಡ್ಡಗಾಡು ಜನಾಂಗದಲ್ಲಿರುವ ಮುಸ್ಲಿಮರು ಅವರ ಜೊತೆ ಹೋಗಲು ಒಪ್ಪುತ್ತಾರೆ ಅನ್ನಿಸುತ್ತದಾ? ಕಾಶ್ಮೀರದ ವಿಷಯದಲ್ಲಿ ಭಾವೊದ್ರೆಕಕ್ಕೊಳಗಾಗಿ ಮಾತಾಡಿದಾಗ ಇವೆಲ್ಲ ವಾಸ್ತವತೆಗಳನ್ನ ಮೀರಿ ಆವೇಶದಿಂದ ವಾದಿಸಲು ಶುರು ಮಾಡಿಬಿಡುತ್ತೇವೆ ನಾವೆಲ್ಲಾ.

ಅಂದು ಬಹುಷಃ ಪಾಕಿಗಳ ಗುಂಡೇಟಿನಿಂದ ಕಾಶ್ಮೀರಿಗಳನ್ನ ಬಚಾವ್ ಮಾಡದೆ ಇದ್ದಿದ್ದರೆ,ಇಂದು ಅದೇ ಕಾಶ್ಮೀರಿಗಳಿಂದ  ಕಲ್ಲಿನೇಟು ತಿನ್ನುವ ಸ್ಥಿತಿ ನಮ್ಮ ಭದ್ರತಾಪಡೆಗಳಿಗೆ ಬರುತ್ತಿರಲಿಲ್ಲ! ಯುದ್ಧದ ನಂತರ ಬಹುತೇಕ ಶಾಂತವಾಗೆ ಇತ್ತು ಕಾಶ್ಮೀರ, 63ರಲ್ಲಿ ಹಜರತ್ ಬಾಲ್ ಮಸೀದಿಯಲ್ಲಿರುವ ಪ್ರವಾದಿ ಮಹಮದ್ದರದೆಂದು ನಂಬಲಾಗಿರುವ ಗಡ್ಡದ ಕೂದಲು ಮಾಯವಾದ ಸಂದರ್ಭದಲ್ಲಿ ಘಟಿಸಿದ ದಂಗೆಗಳು ಭಾರತವಿರೋಧಿಯಾಗಿ ಬದಲಾದದದ್ದು ಈ ಬೆಳವಣಿಗೆಯಲ್ಲಿ ಒಂದು ಪ್ರಮುಖ ಘಟ್ಟ.ತೀರ ಕಾಶ್ಮೀರಿಗಳೆಲ್ಲರು ಭಾರತವನ್ನ ವಿರೋಧಿಸುತ್ತಾರೆ ಮತ್ತು ಪಾಕಿಸ್ತಾನಕ್ಕೆ ಸೇರ ಬಯಸುತ್ತಾರೆ ಅನ್ನುವುದೇ ನಿಜವಾಗಿದ್ದರೆ, ೬೫ರಲ್ಲಿ ಮತ್ತೆ ಪಾಕಿಗಳು ನುಗ್ಗಿ ಬಂದಾಗ ಭಾರತೀಯ ಸೇನೆಗೆ ಅವರು ಬೆಂಬಲ ಕೊಡುತಿದ್ದರ?

a/c ರೂಮಿನಲ್ಲಿ ಕುಳಿತು ಕಂಪ್ಯೂಟರ್ ಕೀಲಿಮಣೆಯನ್ನು ರೋಷ ಆಕ್ರೋಶದಿಂದ ಕುಟ್ಟುವ ನಮಗೆ,ಕ್ಷಣ ಕ್ಷಣಕ್ಕೂ ಸಾವಿನೊಂದಿಗೆ ಸರಸವಾಡುವ ಸೈನಿಕನ ಮನಸ್ಥಿತಿ,ಅಸಹನೆ,ಹತಾಶೆ ಇವೆಲ್ಲ ಬಹುಷಃ ಅರ್ಥವಾಗಲಿಕ್ಕಿಲ್ಲ ಅಲ್ವಾ? ವಿವಾದಾತ್ಮಕ AFSP (Armed Forces Special Powers Act) ಅನ್ನು ಹಿಡಿದುಕೊಂಡು ಭಧ್ರತ ಪಡೆಗಳನ್ನ ವಿಲನ್ ಗಳಂತೆ ಚಿತ್ರಿಸೋ ಬುರ್ಖಾದತ್ರಂತವ್ರಿಗೆ ವಾಸ್ತವದ ಅರಿವಿದೆಯಾ?

ಪ್ರತೀ ಕಲ್ಲು ತೂರಾಟವೂ ಐದರಿಂದ ಎಂಟುಲಕ್ಷ ರೂಪಾಯಿ ವ್ಯವಹಾರ.ಅನ್ನುವಂತ ಸುದ್ದಿಗಳು ಬಂದಗಲಾದರೂ, ಕಡೆ ಪಕ್ಷ ತೂರಿಬರುವ ಕಲ್ಲಿನ ಹಿಂದಿನ ಕತೆಯೇನಿರಬಹುದು ಅಂತ ಯೋಚಿಸಲು ಸರ್ಕಾರಕ್ಕೆ ಬರೋಬ್ಬರಿ ನೂರು ದಿನಬೇಕಾಯಿತು!,ಕಲ್ಲು ಬೀಸುವ ಕೈಗಳಿಗೆ ಕೆಲಸ ಕೊಟ್ಟರೆ,ಕೆಲಸದ ಮೂಲಕ ಜೀವನ ಕಟ್ಟಿ ಕೊಟ್ಟರೆ.ಹುರಿಯತ್ನಂತ ದೇಶ ದ್ರೋಹಿಗಳ ಮಾತಿಗೆ ಜೈ ಅನ್ನುವ,ಕಾಂಚಾಣಕ್ಕಾಗಿ ಕಲ್ಲೆಸೆಯಲು ಕೈ ಚಾಚುವ ಕೈಗಳು ಕಡಿಮೆಯಾಗಬಹುದೇನೋ? ನಮ್ಮ ರಾಜ್ಯದಲ್ಲಿರುವಂತೆಯೇ ಅಲ್ಲೂ ಭ್ರಷ್ಟಾಚಾರದ ಭೂತವಿದೆ. ಕೇಂದ್ರ ಕೊಡುವ ಹಣವೆಲ್ಲ ಭ್ರಷ್ಟಾಚಾರಿಗಳ ಬಿದ್ದರೆ,ಬಡವರ ಹೊಟ್ಟೆಗೇನು ಬೀಳಬೇಕು?ಹಸಿದ ಹೊಟ್ಟೆಗೆ ಕಲ್ಲಿನಿಂದ ಹಣ ಬರುವುದಾದರೆ ಬೀಸಿಯೇ ಹಸಿವು ನೀಗಿಸಿಕೊಳ್ಳಲು ಮನಸ್ಸು ತಯಾರಾಗಬಹುದು ಅಲ್ಲವೇ? (ಹಾಗಂತ ಕಲ್ಲೆಸೆಯುವ ಮಂದಿಯೆಲ್ಲ ಹಸಿದವರು ಅಂತಲೂ ಹೇಳುವುದು ಮೂರ್ಖತನವಾಗುತ್ತದೆ.ಆದರೆ ಅಂತವರು ಜಾಸ್ತಿ ಇರಬಹುದ ಅನ್ನುವುದು ನನ್ನ ಊಹೆ)ಹೀಗೋದು ಕತೆಯಿಲ್ಲದಿದ್ದರೆ ಖುದ್ದು ಪ್ರಧಾನಿ ಮನಮೋಹನ ಅವ್ರೆ ಕಾಶ್ಮೀರಿ ಯುವಕರಿಗೆ ಕೆಲಸ ಕೊಡಬೇಕು ಅನ್ನುವ ಮಾತನಾಡುತಿದ್ದರ? ಕಾಶ್ಮೀರದಂತ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವದು ಜನಪ್ರಿಯ ಸರಕಾರ.ಮತ್ತು ಅದನ್ನ ಅಲ್ಲಿ ಪ್ರತಿಷ್ಠಾಪಿಸುವ ಜವಾಬ್ದಾರಿಯುತ ಕೆಲಸವನ್ನ ಕೇಂದ್ರ ಸರ್ಕಾರ ಮಾಡಬೇಕು.

ಕಾಶ್ಮೀರ ಅನ್ನುವ ಗಾಯಕ್ಕೆ ಸದ್ಯ ಬೇಕಿರುವುದು ಔಷಧಿ ಹಾಗೆ ಗಾಯವನ್ನ ಮತ್ತೆ ಕೆದಕುವ ಹುರಿಯತ್ನಿಂದ ಮುಕ್ತಿ! ಎರಡರಲ್ಲಿ ಯಾವುದು ಮೊದಲು ಸಿಕ್ಕರೂ ಭಾರತಕ್ಕೆ ಒಳ್ಳೆಯದು.ಅರುಧಂತಿಯ ಮಾತನ್ನೇ ತಿರುಚಿ ಹೇಳುವುದಾದರೆ

ಭಾರತಕ್ಕೂ ಕಾಶ್ಮೀರದಿಂದ (ಕಾಶ್ಮೀರ ಸಮಸ್ಯೆಯಿಂದ) ಆಜಾದಿ ಬೇಕಿದೆ.

(ಚಿತ್ರ ಕೃಪೆ : globalpost.com )

6 thoughts on “ಕರ್ನಾಟಕವೂ ಸಹ ಭಾರತದ ಭಾಗವಾಗಿರಲಿಲ್ಲ!

Add yours

  1. ರಾಕೇಶ್ ಚನ್ನಾಗಿದೆ ಲೇಖನ, ಹಲವಾರು ವಿಷಯಗಳಲ್ಲಿ ನಮ್ಮ ಹಿರಿಯರು ತಪ್ಪು ಮಾಡಿದ್ದು ನಿಜ ಆದರೆ ಆಗಿನ ಸ್ಥಿತಿಗೆ ಅದು ಸಮಂಜಸವಾಗಿತ್ತು…ಈಗಿನವರು ಸ್ವಾರ್ಥ ಹೆಚ್ಚು ದೇಶದ ಹಿತ ಕಡಿಮೆ ಹಾಗಾಗಿ ಈಗ್ಲೂ ಅನ್ಯಾಯ ಆಗ್ತಿರೋದು ಸಾಮಾನ್ಯ ಜನತೆಗೆ…ಇಲ್ಲಿ ಕಾಶ್ಮೀರದ ಜನತೆಯನ್ನು ತಪ್ಪುದಾರಿಗೆ ಎಳೆದದ್ದೂ ಇದೇ..ಒಳ್ಲೆ ಚಿತ್ರಣ.

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑